ಕನ್ನಡ ಕಥೆ, ಸೌಮ್ಯ ಸಿ ಡಿ
*ಶಂಭುವಿನ ಸ್ವಾಭಿಮಾನ* ಒಂದು ಪುಟ್ಟ ಊರು. ಆ ಊರಿನಲ್ಲಿ ಸಣ್ಣ ಮನೆಯಲ್ಲಿ ಶಂಭು ಹಾಗೂ ಅವನ ಕುಟುಂಬದವರು ವಾಸಿಸುತ್ತಿದ್ದರು. ಇವರದ್ದು ತುಂಬಾ ಬಡ ಕುಟುಂಬ.ದುಡಿದರೆ ಮಾತ್ರ ಊಟ ಎನ್ನುವ ಪರಿಸ್ಥಿತಿ.ಇಬ್ಬರು ಕೂಲಿ ಕೆಲಸಕ್ಕೆ ಹೋಗುವವರು. ಅವರು ಅವಿದ್ಯಾವಂತರು ಕೂಡ ಹೌದು.ಶಂಭುವಿಗೆ ಈ ಬಡತನ ಸಾಕಾಗಿ ಹೋಗಿತ್ತು. ಅವನು ತಾನು ಓದಿ ಮುಂದೆ ಒಳ್ಳೆಯ ಉದ್ಯೋಗಕ್ಕೆ ಸೇರಿ ಸಮಾಜ ಸೇವೆ ಮಾಡಬೇಕು ಎಂದು ಕನಸು ಕಾಣುತ್ತಿದ್ದ. ಅವನು ಕಷ್ಟಪಟ್ಟು ದುಡಿಯುವುದರ ಜೊತೆಗೆ,ಶಾಲೆಗೆ ಹೋಗಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ.ಕಷ್ಟಪಟ್ಟು ಕಲಿಯುತ್ತಿದ್ದ ಶಂಭುವಿಗೆ ಜೀವನದಲ್ಲಿ ಮುಂದೆ ಬರಬೇಕು ಏನಾದರೂ ಸಾಧಿಸಬೇಕು ಎಂಬ ಆಸೆ ಆಕಾಂಕ್ಷೆಗಳು ಬೆಳೆಯತೊಡಗಿತು. ಮನೆಯ ಕಷ್ಟಗಳ ನಡುವೆಯೂ ಅವನು ಎಸ್. ಎಸ್. ಎಲ್.ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಗೊಂಡ.ನಂತರ ಮುಂದೆ ಓದಬೇಕು ಅನ್ನುವ ಆಸೆ,ಆದರೆ ಬಡತನ.ಕಾಲೇಜು ಮೆಟ್ಟಿಲು ಹತ್ತಬೇಕಾಗಿದ್ದ ಶಂಭು ಕೆಲಸಕ್ಕೆ ಸೇರಿಕೊಂಡ.ದಿನಾ ಕೆಲಸಕ್ಕೆ ಹೋಗಿ ಹಣ ಸಂಪಾದಿಸಿ, ಕೂಡಿಡುತ್ತಿದ್ದ.ಇದರ ಜೊತೆಗೆ ಅವನು ತನ್ನ ಸಹಪಾಠಿಗಳೊಂದಿಗೆ ಕಾಲೇಜಿನ ವಿಷಯವನ್ನು, ಚಟುವಟಿಕೆಗಳ ಬಗ್ಗೆ ಕೇಳಿ ಮಾಹಿತಿ ಪಡೆದುಕೊಳ್ಳುತ್ತಿದ್ದ. ಒಂದು ದಿನ ಅವನು ತನ್ನ ಮುಂದಿನ ಓದುವಿಕೆಯ ಹಂಬಲವನ್ನು ತನ್ನ ಧಣಿಗಳ ಮುಂದೆ ಪ್ರಸ್ತಾಪಿಸಿದ.ಅವರು ಶಂಭುವಿಗೆ ಉಪಾಯ ತಿಳಿಸಿದರು.ಅವನಿಗೆ ನೇರವಾಗಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ಬರೆಯಲು...